Saturday 16 January 2016

ದೇಶದ ರೈತರಿಗೆ ನರೇಂದ್ರ ಮೋದಿ ಕಳಕಳಿಯ ಪತ್ರ

ಜ್ಞಾನಸೆಲೆ GK4KPSC ಸಾಮಾನ್ಯ ಜ್ಞಾನ

ನವದೆಹಲಿ, ಜನವರಿ 16 : ರೈತ ಭಾರತದ ಬೆನ್ನೆಲುಬು. ಆದರೆ, ಸಂಕ್ರಾಂತಿ ಸುಗ್ಗಿಯ ಸಮಯದಲ್ಲಿ ರೈತ ಹಿಗ್ಗಿದ್ದಾನೆಯೆ? ಇತ್ತೀಚಿನ ದಿನಗಳಲ್ಲಿ ನೈಸರ್ಗಿಕ ಅವಘಡಗಳಿಂದ ಬೆಳೆ ನಾಶವಾಗಿ, ದರ ಕಡಿತದಿಂದಾಗಿ ಜರ್ಝರಿತನಾಗಿದ್ದಾನೆ. ಆತ್ಮಹತ್ಯೆಗೆ ಶರಣಾಗುತ್ತಿದ್ದಾನೆ. ಇಂಥ ಪರಿಸ್ಥಿತಿಯಲ್ಲಿ ರೈತರ ಆತ್ಮಸ್ಥೈರ್ಯ ಹಿಗ್ಗಿಸುವಂತೆ ಹೊಸ ವಿಮೆ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿ ಪ್ರಾರಂಭಿಸಿದ್ದು, ಇದರ ಪ್ರಯೋಜನೆ ಪಡೆಯುವಂತೆ ರೈತರಿಗೆ ಕಳಕಳಿಯ ಪತ್ರ ಬರೆದಿದ್ದಾರೆ.  

ನನ್ನ ಆತ್ಮೀಯ ರೈತಾಪಿ ಸಹೋದರ, ಸಹೋದರಿಯರೆ,

 'ಪ್ರಧಾನಮಂತ್ರಿ ಫಸಲ್ ವಿಮೆ ಯೋಜನೆ' ಸುದ್ದಿ ನಿಮಗೀಗಾಗಲೆ ತಲುಪಿರಬಹುದು. ನೈಸರ್ಗಿಕ ಅವಘಡಗಳಿಂದ ಬೆಳೆ ನಾಶವಾಗಿದ್ದರಿಂದ ಅಥವಾ ಕೆಳಗಿಳಿಯುತ್ತಿರುವ ದರದಿಂದಾಗಿ ದೇಶದ ರೈತರು ಹಲವಾರು ಬಾರಿ ತೊಂದರೆ ಸಿಲುಕಿದ್ದಾರೆ. ಅಂಥ ತೊಂದರೆಗಳಿಗೆ ಸಿಲುಕಿದ ರೈತರಿಗೆ ಸಹಾಯ ಮಾಡಲು ಕಳೆದ ಹದಿನೆಂಟು ತಿಂಗಳಲ್ಲಿ ನಮ್ಮ ಸರಕಾರ ಅನೇಕ ಕ್ರಮಗಳನ್ನು ತೆಗೆದುಕೊಂಡಿದೆ.
 
ಹಿಂದೆಯೂ ಕೂಡ ರೈತರಿಗಾಗಿ ವಿಮೆ ಯೋಜನೆಗಳಿದ್ದವು. ಅಧಿಕ ಕಂತುಗಳ ದರ, ಪ್ರಾದೇಶಿಕ ಬೆಳೆನಾಶದ ಕವರೇಜ್ ಇಲ್ಲದಿರುವುದು ಮತ್ತಿತರ ಸಮಸ್ಯೆಗಳಿಂದ ಯೋಜನೆಗಳು ಯಶಸ್ವಿಯಾಗಿಲ್ಲ. ಇದರ ಪರಿಣಾಮವಾಗಿ ಶೇ.20ಕ್ಕಿಂತಲೂ ಕಡಿಮೆ ರೈತರು ಮಾತ್ರ ಬೆಳೆ ವಿಮೆಗೆ ಮೊರೆಹೋದರು. ಕಾಲಕ್ರಮೇಣ ವಿಮಾ ಯೋಜನೆಯ ಮೇಲೆ ರೈತರಿಗೆ ವಿಶ್ವಾಸವೇ ಹೋಗಿತ್ತು.

  ಹಿನ್ನೆಲೆಯಲ್ಲಿ, ಹಲವಾರು ರಾಜ್ಯಗಳ ರೈತರು, ಸಲಹೆಗಾರರು, ವಿಮಾ ಕಂಪನಿಗಳ ಜೊತೆ ಸಾಕಷ್ಟು ಚರ್ಚೆ ನಡೆಸಿದೆವು. ಮಾತುಕತೆಯ ಸಾಫಲ್ಯಋತೆಯಿಂದಾಗಿ ಇಂದು ದೇಶದ ರೈತ ಸಹೋದರ, ಸಹೋದರಿಯರ ಮುಂದೆ ಮಹತ್ವಾಕಾಂಕ್ಷೆಯ 'ಪ್ರಧಾನಮಂತ್ರಿ ಫಲಸು ವಿಮೆ ಯೋಜನೆ'ಯನ್ನು ಇಡುತ್ತಿದ್ದೇನೆ.

ಈ ಯೋಜನೆಯ ಮಹತ್ವದ ಅಂಶಗಳು ಕೆಳಗಿನಂತಿವೆ 
* ಇದು ಬೆಳೆ ವಿಮೆಗೆ ಸರಕಾರ ನೀಡುತ್ತಿರುವ ಗರಿಷ್ಠ ಕೊಡುಗೆ. 
* ಈ ಕಾರಣದಿಂದಾಗಿ ರೈತರು ಅತಿ ಕಡಿಮೆ ವಿಮಾ ಕಂತನ್ನು ಕಂಪನಿಗಳಿಗೆ ನೀಡಬೇಕಾಗುತ್ತದೆ. 
 * ಎಲ್ಲಾ ಋತುವಿನಲ್ಲಿಯೂ ಕಾಳುಕಡಿ, ಆಹಾರಧಾನ್ಯ, ಬೇಳೆಕಾಳುಗಳಿಗೆ ಒಂದೇ ರೀತಿಯ ದರ ನಿಗದಿಪಡಿಸಲಾಗಿದೆ. ಖಾರಿಫ್ ಬೆಳೆಗೆ ಶೇ.2 ಮತ್ತು ರಬಿ ಬೆಳೆಗೆ ಶೇ.1ರಷ್ಟು ಮಾತ್ರ. 
 * ವಿಮೆ ಮೊತ್ತದ ಮೇಲೆ ಯಾವುದೇ ನಿರ್ಬಂಧವಿರುವುದಿಲ್ಲ ಮತ್ತು ರೈತರಿಗೆ ಪೂರ್ತಿ ವಿಮೆ ಕವರೇಜ್ ಇರುತ್ತದೆ. ಹೀಗಾಗಿ ರೈತರಿಗೆ ಸಿಗಬೇಕಾದ ವಿಮೆ ಮೊತ್ತದಲ್ಲಿ ಯಾವುದೇ ಕಡಿತವಿರುವುದಿಲ್ಲ. 
* ಮೊದಲಬಾರಿಗೆ, ಸ್ಥಳೀಯ ರಿಸ್ಕ್ ಕವರ್ ಅಡಿಯಲ್ಲಿ ಮುಳುಗಡೆಯಾದ ಬೆಳೆಗಳಿಗೂ ವಿಮೆ ಇರುತ್ತದೆ. 
* ಬಿರುಗಾಳಿ, ಅಕಾಲಿಕ ಮಳೆಯಿಂದಾಗಿ ಸುಗ್ಗಿಯ ನಂತರ ಸಂಭವಿಸಿದ ಬೆಳೆ ಹಾನಿಯನ್ನೂ ಮೊದಲ ಬಾರಿಗೆ ಕವರ್ ಮಾಡಲಾಗುತ್ತಿದೆ.
 * ರೈತರಿಗೆ ಸಿಗಬೇಕಾದ ಹಣದ ಮೌಲ್ಯೀಕರಣ ಮತ್ತು ಆ ಹಣದ ತ್ವರಿತ ವಿಲೇವಾರಿಗಾಗಿ ಮೊಬೈಲ್ ಮತ್ತು ಸೆಟಲೈಟ್ ತಂತ್ರಜ್ಞಾನವನ್ನು ಕೂಡ ಮೊದಲ ಬಾರಿಗೆ ಬಳಸಿಕೊಳ್ಳಲಾಗುತ್ತಿದೆ. 
 
 ಈ ಯೋಜನೆಯನ್ನು ಮುಂದಿನ ಖಾರಿಫ್ ಸೀಸನ್ ನಿಂದ ಅನುಷ್ಠಾನಗೊಳಿಸಲಾಗುವುದು. ಈ ಯೋಜನೆಗೆ ಸೇರುವುದು ಸುಲಭವಾಗಿದ್ದು, ಹೆಚ್ಚು ಭದ್ರತೆ ನೀಡುತ್ತದೆ. ರೈತಾಪಿ ಜನರು ತುಂಬು ಹೃದಯದಿಂದ ಈ ಯೋಜನೆಯನ್ನು ಸ್ವೀಕರಿಸಬೇಕು, ಉತ್ಸಾಹದಿಂದ ಭಾಗವಹಿಸಬೇಕು ಮತ್ತು ಯೋಜನೆಯ ಲಾಭವನ್ನು ಪಡೆಯಬೇಕು.


No comments:

Post a Comment

Note: only a member of this blog may post a comment.